ಅಗೇಲು ಸೇವೆ
ಈ ವಿಶಿಷ್ಟ ಅಗೇಲು ಸೇವೆಯೆಂಬ ಶೈವಾಗಮೋಕ್ತ ತಂತ್ರೋಕ್ತ ಪೂಜಾ ವಿಧಿಯು ಶ್ರೀ ದೇವಳದಲ್ಲಿ ಮೇ 8ರಂದು ಮಧ್ಯಾಹ್ನ 4 ಗಂಟೆಯಿಂದ ನಡೆಯಲಿದೆ.
ನಿರಂತರವಾಗಿ 1000 ತಂತ್ರೋಕ್ತ ರೀತ್ಯಾ ರಂಗಪೂಜೆ ನಡೆದ ದೇವಾಲಯದಲ್ಲಿ ಈ ಅಗೇಲು ಸೇವೆಯೆಂಬ ವಿಶೇಷ ಪ್ರಕ್ರಿಯೆಯನ್ನು ನಡೆಸಲು ಅವಕಾಶವಿರುತ್ತದೆ.
ಅಂತೆಯೇ ನಮ್ಮೀ ದೇವಾಲಯದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ದಿನದಿಂದ ಇಂದಿನವರೆಗೂ ನಿರಂತರವಾಗಿ ರಂಗಪೂಜೆ ನಡೆಯುತ್ತಿದ್ದು (7300ಕ್ಕೂ ಮೇಲ್ಪಟ್ಟು) ಪ್ರತಿ ವರ್ಷ ವೈಶಾಖ ಶುದ್ಧ ಏಕಾದಶಿಯಂದು ಅಗೇಲು ಸೇವೆಯನ್ನು ಸಲ್ಲಿಸಲಾಗುತ್ತಿದೆ.
ಮಹಾರಂಗಪೂಜೆಯ ವಿಸ್ತೃತ ರೂಪವಾಗಿ ಶ್ರೀ ದೇವಳದ ಪ್ರಾಕಾರದ 786 ನಿರ್ದಿಷ್ಟ ಸ್ಥಳಗಳಲ್ಲಿ ಕಡುಬು, ಶಾಲ್ಯನ್ನ, ಅಕ್ಕಿ ವಡೆ, ವೀಳ್ಯ, ನಾಣ್ಯ, ಉಂಡೆ, ದೂಪ, ದೀಪ, ಪುಷ್ಪಗಳನ್ನು ಎಡೆಗಳಲ್ಲಿ ಬಡಿಸಿ, ವಿಧಿಯಂತೆ ಅರ್ಚಿಸಲಾಗುತ್ತದೆ. ಕೊನೆಯಲ್ಲಿ ಧ್ವಜಸ್ತಂಭದೆದುರು ರಾಷ್ಟ್ರಾಶೀರ್ವಾದಪೂರ್ವಕ ಮಂಗಳಾರತಿಯನ್ನು ಬೆಳಗಲಾಗುತ್ತದೆ.
ತದನಂತರ ಸೇವಾದಾರರು ಸ್ವತಃ ದೇವರೆದುರು “ಪ್ರಸಾದಂ ದೇಹಿ” ಎಂದು ಪ್ರಾರ್ಥಿಸಿ ಪ್ರಸಾದವನ್ನು ಸ್ವೀಕರಿಸುವುದು ಪದ್ಧತಿ.
ದೇವಾಲಯದಲ್ಲಿ ಅಳವಡಿಸಲ್ಪಟ್ಟ ತಂತ್ರದ ಮುಖೇನ ಅತಿವೃಷ್ಟಿ + ಅನಾವೃಷ್ಟಿ ಪರಿಹಾರ, ಆಹಾರ ಸಂಸ್ಕರಣೆ, ಕ್ಷೇತ್ರಾಭಿವೃದ್ಧಿ ಇತ್ಯಾದಿ ಮಹೋನ್ನತ ಕಾರ್ಯಗಳನ್ನು ಅಗೇಲು ಸೇವೆಯನ್ನು ಮಾಡುವ ಮೂಲಕ ಸಾಧಿಸಬಹುದಾಗಿದೆ.
ಎಲ್ಲಾ ಭಕ್ತಾದಿಗಳಿಗೆ ಈ ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶವಿದ್ದು, ಒಂದು ಸೇವೆಯ ಬಗ್ಗೆ ರೂ.100 ನಿಗದಿಪಡಿಸಲಾಗಿದೆ.
ಭಗವದ್ಭಕ್ತರು ಈ ಸೇವೆಯ ಮುಖೇನ ಆಹಾರ ಸಂಸ್ಕರಣೆ ಪಡೆದು ಅನ್ನದಿಂದ ಲಭ್ಯವಾಗುವ ಜ್ಞಾನ ಪಡೆದು ಮುಮುಕ್ಷುಗಳಾಗಲಿ ಎಂದು ಹಾರೈಸುತ್ತೇವೆ.
ವಿ.ಸೂ : ಸ್ವತಃ ಪಾಲ್ಗೊಳ್ಳಲು ಸಾಧ್ಯವಾಗದಿದ್ದಲ್ಲಿ ಸೇವಾ ಶುಲ್ಕವನ್ನು ಕಚೇರಿಯಲ್ಲಿ ಅಥವಾ Online ಮೂಲಕ ಪಾವತಿಸಿ ಈ ಸೇವೆಯಲ್ಲಿ ಭಾಗವಹಿಸಬಹುದಾಗಿದೆ. ಆದರೆ, ಪ್ರಸಾದವನ್ನು ಅಂಚೆಯ ಮೂಲಕ ಕಳುಹಿಸುವ ವ್ಯವಸ್ಥೆ ಇರುವುದಿಲ್ಲ.
ಆಡಳಿತ ಮಂಡಳಿ
ಆಡಳಿತ ಮಂಡಳಿ

